ಗುಲ್ಬರ್ಗಾದಲ್ಲಿ ಕರಿ ಮಣ್ಣಿನ ಮಡಿಕೆ ಎಂದೊಡನೆ ನೆನಪಾಗುವ ಹೆಸರು ಮೇಳಕುಂದಾದ ಕರಿಮಡಿಕೆ. ರಾಜ್ಯದೆಲ್ಲೆಡೆ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಕೆಂಪು-ಹಳದಿ ಮಿಶ್ರಿತ ಬಣ್ಣದಿಂದ ಕೂಡಿದ ಮಡಿಕೆಗಳು ಕಾಣ ಸಿಗುತ್ತವೆ. ಆದರೆ ಮೇಳಕುಂದ ಮಡಿಕೆಗಳದು ಮಾತ್ರ ಕರಿಬಣ್ಣ ಇವು ಚಿತ್ತಾರ, ಗಟ್ಟಿ-ಗಡಸುತನ, ನೀರನ್ನು ತಣ್ಣಗೆ ಇರಿಸುವ ವಿಶೇಷ ಗುಣಗಳಿಂದಾಗಿ ಹೆಸರುವಾಸಿ. ಹೀಗಾಗಿ ಬೇಡಿಕೆಯೂ ಹೆಚ್ಚು. ಮೇಳಕುಂದ ಮಡಿಕೆಯ ಈ ವೈಶಿಷ್ಟಕ್ಕೆ ಪ್ರಮುಖ ಕಾರಣ ಕತ್ತೆ, ಕುದುರೆಗಳ ಲದ್ದಿ ಹಾಗು ತೊಗರಿ ಕಡ್ಡಿಯ ಮಸಿ.ಬೇಸಿಗೆ ಬಂತೆಂದರೆ ಮೈ ದಬ್ಬೆ ಏಳಿಸುವ ಬಿಸಿಲಲ್ಲೂ ಮಣ್ಣಿನ ಮಡಿಕೆಯಲ್ಲಿ ತುಂಬಿದ ನೀರು ಇಲ್ಲಿ ಐಸ್ನೀರಿನಂತೆ. ಗಂಟಲು ತಂಪಾಗಿಸುತ್ತದೆ. ದೇಹಕ್ಕೆ ಹಿತ ನೀಡುತ್ತದೆ. ಹೀಗಾಗಿ ಮಣ್ಣಿನ ಮಡಿಕೆಗಳ ವ್ಯಾಪಾರದ ಭರಾಟೆಯು ಹೆಚ್ಚಿರುತ್ತದೆ.ಮೇಳಕುಂದಾ ಗ್ರಾಮದ ಕುಂಬಾರರ ಓಣಿಯಲ್ಲಿ ಮಣ್ಣು, ಕತ್ತೆ, ಕುದುರೆ ಲದ್ದಿ ಕುಟ್ಟಿ ಸೋಸುವ, ತುಳಿದ ಮಣ್ಣು ಮುದ್ದೆ ಕಟ್ಟುವ, ತಿರುಗುವ ತಿಗರಿ ಮೇಲೆ ಮಣ್ಣು ಮಡಿಕೆಯಾಗಿ ಹೊರಹೊಮ್ಮುವ, ಹಸಿಮಡಿಕೆ ಒಟ್ಟೈಸಿ ಆವೆಗೆ ಹಾಕಿ ಸುಡುವ ಕೆಲಸದಲ್ಲಿ ಕುಂಭಾರರು ಸಕ್ರಿಯರಾಗಿದ್ದಾರೆ. ಬೆಳಿಗ್ಗೆ ತಿಗರಿ ಸುತ್ತುತ್ತಿದ್ದರೆ, ಸಂಜೆ ಹಸಿ ಮಡಿಕೆಗೆ ರೂಪಕೊಡಲು ಮಸಿ ಹಚ್ಚಿ ಬಡಿಯುವ ದಡ್ ಬಡ್ ಸದ್ದು ಫರ್ಲಾಂಗ್ ದೂರಕ್ಕೆ ಕೆಳಿಸುತ್ತದೆ. ಡಿಸೆಂಬರ್ ನಿಂದ ಜೂನ್ ವರೆಗೆ ಇವರಿಗೆ ಬಿಡುವಿಲ್ಲ. 'ಇಲ್ಲಿ ಮಣ್ಣಿಗೆ ಬರವಿಲ್ಲ, ಆದರೆ ರಾಜ್ಯಾದ ಇತರ ಪ್ರದ್ ಏಶಗಳಂತೆ ಈ ಪ್ರದೇಶದ ಮಣ್ಣಿಗೆ ಅಂಟಿನ ಅಂಶ ಕಡಿಮೆ. ಹೀಗಾಗಿ ಹಸಿ ಅಥವಾ ಬೆಂದ ಮಡಿಕೆ ಒಡೆಯದಂತೆ ಕಾಯ್ದುಕೊಳ್ಳಲು ಲದ್ದಿ ಬಳಸಲಾಗುತ್ತದೆ. ಇದಕ್ಕಾಗಿ ಕುದುರೆ-ಕತ್ತೆ ಲದ್ದಿ ಹಸಿ ಮಣ್ಣಿಗೆ ಬೆರೆಸಲೇಬೇಕು. ಸಮಸ್ಯೆ ಎಂದರೆ ಲದ್ದಿ ಬೇಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ'-ಇದು ಮೇಳಕುಂದಾ ಗ್ರಾಮದ ಬಾಬು ಕುಂಬಾರರ ವೇದನೆ. 'ಗುಲ್ಬರ್ಗಾ ನಗರದ ದರ್ಗಾ ರಸ್ತೆ, ಗಂಜ್ ಮಾರುಕಟ್ಟೆ ಪ್ರದೇಶಗಳಲ್ಲಿ ಜಟಕಾ ಗಾಡಿಗಳಿಗಾಗಿ ಕುದುರೆ ಸಾಕುವವರಲ್ಲಿ ಮೊದಲೆ ಕಾಯ್ದಿರಿಸಿ ಲದ್ದಿ ಖರಿದೀಸಿ ತಂದು ತಿಂಗಳುಗಳ ಮೊದಲೇ ದಾಸ್ತಾನು ಇರಿಸಬೇಕು. ಕತ್ತೆಗಳಂತೂ ಇತ್ತೀಚೆಗೆ ಇಲ್ಲ ಎಂಬಷ್ಟು ಕಡಿಮೆಯಾಗಿವೆ. ಈಗ ಕುದುರೆ ಲದ್ದಿಯನ್ನೆ ಬಳಸುತ್ತೆವೆ. ಒಂದು ಮೂಟೆ ಲದ್ದಿಗೆ ೧೦೦ರೂ ಬೆಲ ಇದೆ. ಕುದುರೆಗಳ ಸಂಖ್ಯೆಯು ಕಡಿಮೆಯಾಗಿದೆ. ಗೊಬ್ಬರಕ್ಕಾಗಿ ಕೃಷಿಕರಿಂದ ಹೆಚ್ಚಿನ ಬೇಡಿಕೆ ಇರುವುದರಿಂದ ದರ ನಿಗದಿಯಲ್ಲೂ ಪೈಪೋಟಿ ಇರುತ್ತದೆ' ಎನ್ನುತ್ತಾರೆ ಶ್ರೀಪತಿ ಕುಂಬಾರ. 'ಕುದುರೆ ಅಥವ ಕತ್ತೆ ಲದ್ದಿ ಖರೀದಿಸಿ ತಂದು ಒಣಗಿಸಿ ಕುಟ್ಟಿ ಪುಡಿ ಮಾಡಿ, ಅದಕ್ಕೆ ತೊಗರಿ ಕಟ್ಟಿಗೆಯ ಇದ್ದಿಲು ಮಸಿಯನ್ನು ಸೇರಿಸಿ ಇಟ್ಟಿರುತ್ತಾರೆ. ಇದನ್ನು ನಿಗದಿತ ಪ್ರಮಾಣದಲ್ಲಿ ಮಣ್ಣಿನ ಮುದ್ದೆಗೆ ಬೆರೆಸಿ ಹದಮಾಡುತ್ತಾರೆ. ಈ ಮಣ್ಣನ್ನು ಮತೆ ಮುದ್ದೆ ಮಾಡಿ ತಿಗರಿಯಲ್ಲಿ ಸುತ್ತಿ ಮಡಿಕೆ ತಯಾರಿಸುತ್ತಾರೆ. ಈ ಹಂತದಲ್ಲಿ ಮಡಿಕೆ ಹಳದಿ ಬಣ್ಣದಲ್ಲೇ ಇರುತ್ತದೆ. ಆ ಬಳಿಕ ಅದನ್ನು ಬಡಿದು ಆಕಾರ ನೀಡಲಾಗುತ್ತದೆ. ಈ ಹಂತದಲ್ಲಿ ಇದಕ್ಕೆ ಆವೆಯಲ್ಲಿ ಲಭಿಸಿದ ಇದ್ದಿಲು ಮಸಿ ಪುಡಿಯನ್ನು ಮೆತ್ತಿ ಬಡಿಯಲಾಗುತ್ತದೆ. ಇದರಿಂದ ಮಡಿಕೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಗಟ್ಟಿತನ ಬರುವುದರೊಂದಿಗೆ, ಆವೆಯಲ್ಲಿ ಬೆಂದು ಸಿದ್ದವದಾಗ ನೀರು ಹಾಕಿಟ್ಟರ ಫ್ರಿಡ್ಜಿನಲ್ಲಿ ಇರಿಸಿದಷ್ಟೆ ತಂಪಾಗಿ ಹಿತವಾಗಿರುತ್ತದೆ' ಎನ್ನುವುದು ಕುಂಬಾರರ ಸ್ಪಷ್ಟ ವಿವರಣೆ. ಇವುಗಳ ವೈಶಿಷ್ಟಗಳಿಂದಾಗಿ ಹೈದರಾಬಾದ್ ಪ್ರದೇಶದಲ್ಲಷ್ಟೇ ಅಲ್ಲ, ಮಹಾರಾಷ್ಟ್ರದ ಸೊಲ್ಲಾಪುರ, ಲಾತೂರು ಮುಂತಾದ ಕಡೆಗಳಲ್ಲು ಬಿಕಾರಿಯಾಗುತ್ತದೆ. ಇಲ್ಲಿ ದೊಡ್ಡ ಗಾತ್ರ ಹಾಗು ಸಣ್ಣ ಗಾತ್ರ ಎಂಬ ಎರಡು ನಮೂನೆಯ ಮಡಿಕೆ ಸಿದ್ದವಾಗುತ್ತದೆ. ಸಣ್ಣದಕ್ಕೆ ವ್ಯಾಪಾರಸ್ತರು ಗ್ರಾಮಕ್ಕೆ ಬಂದು ತಲಾ ೪೦ರೂ ಇಂದ ೫೦ರೂ, ದೊಡ್ಡದಕ್ಕೆ ತಲಾ ೬೦ರೂ ರಿಂದ ೮೦ರೂ ಬೆಲೆಗೆ ಖರೀದಿಸುತ್ತಾರೆ. ಆದರೆ ಬೇಸಿಗೆಯ ಬಿರು ಬಿಸಿಲಿಗೆ ಮಾರುಕಟ್ಟೆಯ ದರ ದುಪ್ಪಟ್ಟಾಗುತ್ತದೆ!